ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಪಿದಾಯಿ ಆಯ್ಕೆ..
ಈ ವರ್ಷದ ಮೈಸೂರು ದಸರಾ ಉತ್ಸವದ ಅಂಗವಾಗಿ ನಡೆಯುವ ಚಲನಚಿತ್ರೋತ್ಸವಕ್ಕೆ ಪಿದಾಯಿ ಆಯ್ಕೆಯಾಗಿದ್ದು ಚಿತ್ರವು *ಮೈಸೂರಿನಲ್ಲಿ ಸೆಪ್ಟೆಂಬರ್ 18, ಗುರುವಾರದಂದು ಮಧ್ಯಾಹ್ನ 1:15ಕ್ಕೆ* ಪ್ರದರ್ಶನಗೊಳ್ಳಲಿದೆ.
ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ಅವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12ನೇ ತಾರೀಕಿನಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದ್ದು ವೀಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅದೇ ಸಂದರ್ಭದಲ್ಲಿ ಈ ಸಂತೋಷದ ವಿಷಯವನ್ನೂ ಚಿತ್ರತಂಡದವರು ಹಂಚಿಕೊಂಡರು.
ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಖ್ಯಾತ ನಟರಾದ ಶರತ್ ಲೋಹಿತಾಶ್ವರವರು ಅಭಿನಯಿಸಿದ್ದಾರೆ. ಇವರ ಜೊತೆಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ದ್ರುವ, ನಿಹಾ, ಕುಶಿ ಶೇಖರ್ ಮುಂತಾದವರು ಅಭಿನಯಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಜೀಟಿಗೆ ಚಿತ್ರದ ಛಾಯಾಗ್ರಾಹಕರಾದ ಉಣ್ಣಿ ಮಾಡವೂರ್ರವರು ಈ ಸಿನಿಮಾದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಎರಡು ಸಲ ರಾಷ್ಟ್ರ ಪ್ರಶಸ್ತಿ ವಿಜೇತರಾಗಿ, ವಿಶ್ವದಲ್ಲೇ ಅತೀಹೆಚ್ಚು ಸಿನಿಮಾ ಸಂಕಲನ ಮಾಡಿ ದಾಖಲೆ ಹೊಂದಿರುವ ಸುರೇಶ್ ಅರಸ್ ಅವರು ಈ ಚಿತ್ರಕ್ಕೆ ಸಂಕಲನಕಾರರಾಗಿದ್ದಾರೆ. ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಜೊತೆಗೂಡಿ ಬರೆದಿದ್ದಾರೆ. ಚಿತ್ರವನ್ನು ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.ಮಲಯಾಳಂ ಚಿತ್ರ ರಂಗದ ಪ್ರಸಿದ್ಧ ಕವಿ ಐದು ಸಲ ಕೇರಳ ಸರಕಾರದ ಪ್ರಶಸ್ತಿ ವಿಜೇತ ಪದ್ಮಶ್ರೀ ಕೈತಪ್ರಮ್ ದಾಮೋದರನ್ ನಂಬೂದಿರಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸುಧೀರ್ ಅತ್ತಾವರ, ತುಳು ಅಕಾಡೆಮಿ ಪ್ರಶಸ್ತಿ ವಿಜೇತರಾದ ಕುಶಾಲಾಕ್ಷಿ ಕಣ್ವತೀರ್ಥರವರ ಸಾಹಿತ್ಯವಿದ್ದು ಅಜಯ್ ನಂಬೂದಿರಿಯವರು ಸಂಗೀತ ನೀಡಿದ್ದಾರೆ. ಪ್ರಸಿದ್ದ ಹಾಡುಗಾರರಾದ ಸಂಗೀತ ವಿದ್ಯಾನಿಧಿ ಡಾಕ್ಟರ್ ವಿದ್ಯಾಭೂಷಣ್ ರವರು ಈ ಚಿತ್ರದ ಮೂಲಕ ಪ್ರಪ್ರಥಮವಾಗಿ ಸಿನಿಮಾವೊಂದರಲ್ಲಿ ಹಾಡಿದ್ದಾರೆ ಎಂಬುದು ಇನ್ನೊಂದು ವಿಶೇಷತೆ. ಜೊತೆಗೆ ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್, ಭಾವನಾ ಮುಂತಾದವರು ಕಂಠದಾನ ಮಾಡಿದ್ದಾರೆ. ಮೌನಕ್ಷಣಗಳಿಗೆ ಪ್ರಾಮುಖ್ಯತೆಯಿರುವ ಈ ಚಿತ್ರಕ್ಕೆ ವಿಶಿಷ್ಠರೀತಿಯ ಹಿನ್ನಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಕಾರರಾದ ದೀಪಾಂಕುರನ್ ರವರು ನೀಡಿದ್ದಾರೆ. ಚಿತ್ರದ ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡು, ವಸ್ತ್ರವಿನ್ಯಾಸಕಾರರಾಗಿ ಮೀರಾ ಸಂತೋಷ್, ಪ್ರಸಾಧನವನ್ನು ಬಿನೋಯ್ ಕೊಲ್ಲಮ್, ಮುಖ್ಯ ಸಹನಿರ್ದೇಶಕರಾಗಿ ವಿಘ್ನೇಶ್ ಕುಲಾಲ್, ಸಹ ನಿರ್ದೇಶಕರಾಗಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ, ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಹಾಗೂ ಸ್ಥಿರ ಛಾಯಾಗ್ರಾಹಕರಾಗಿ ದೀಪಕ್ ಉಪ್ಪಳ ನಿರ್ವಹಿಸಿದ್ದಾರೆ.
ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಎ. ಯಸ್, ಖ್ಯಾತ ಕವಿ ಅಡ್ವೋಕೇಟ್ ಶಶಿರಾಜ್ ಕಾವೂರವರು ಬರೆದ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.
ಈ ಚಿತ್ರದಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಹಃ” [ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೇವರು ನೆಲೆಸುತ್ತಾರೆ] ಎಂಬ ಉಲ್ಲೇಖದೊಂದಿಗೆ ಭೋಜಣ್ಣ ಎಂಬ ಮಹಮ್ಮಾಯಿ ಪಾತ್ರಿಯವರ ಮನೆಗೆ ವಿದ್ಯಾವಂತೆಯೊಬ್ಬಳು ಸೊಸೆಯಾಗಿ ಬಂದಾಗ, ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಕಂಡು ಅವಳು ನಡೆಸುವ ಸಾತ್ವಿಕ ಸಂಘರ್ಷ ಹಾಗೂ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಲು ಭೋಜಣ್ಣ ತೆಗೆದುಕೊಳ್ಳುವ ದೃಢನಿರ್ಧಾರವು ಕಥೆಯ ಜೀವಾಳವಾಗಿದೆ. ಕೋಲ್ಕತ್ತಾ, ಸಿಮ್ಲಾ, ಝಾರ್ಖಂಡ್, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ ವ್ಯಾಪಕವಾದ ಪ್ರಶಂಸೆಗೆ ಈ ಚಿತ್ರವು ಭಾಜನವಾಗಿತ್ತು.
Comments
Post a Comment